ಹಳೆಯ ಮೈಸೂರು–ಬೆಂಗಳೂರು ಹೆದ್ದಾರಿಯ ನೆನಪುಗಳು
ಮೈಸೂರು ಮತ್ತು ಬೆಂಗಳೂರಿನ ನಡುವೆ ಇಂದು ಎಕ್ಸ್ಪ್ರೆಸ್ ಹೈವೇ ನಿರ್ಮಾಣವಾಗಿದೆ. ಆರು ಪಥದ ಈ ಹೆದ್ದಾರಿ ಎರಡೂ ಬದಿಯ ಸರ್ವಿಸ್ ರಸ್ತೆಗಳೊಂದಿಗೆ ಆಧುನಿಕತೆಯ ಒಂದು ಚಿಹ್ನೆಯಾಗಿದೆ. ಆದರೆ ಒಂದು ಕಾಲದಲ್ಲಿ ಬೆಂಗಳೂರು ಮತ್ತು ಮೈಸೂರಿನ ನಡುವೆ ಕೇವಲ ಎರಡು ಪಥ ರಸ್ತೆಯ ಹೆದ್ದಾರಿ ಇತ್ತು. ನಂತರ ಅದು ನಾಲ್ಕು ಪಥದ ರಸ್ತೆಯಾಗಿ ರೂಪಾಂತರಗೊಂಡಿತು.
ಈ ಹಳೆ ಹೆದ್ದಾರಿ ಇತರೆ ಹೆದ್ದಾರಿಗಳಿಗಿಂತ ವಿಶಿಷ್ಟ
ಹಾಗು ವಿಭಿನ್ನ — ಯಾಕೆಂದರೆ
ಈ ಹೆದ್ದಾರಿಯಲ್ಲಿ ಸಿಗುವ ಪ್ರತಿಯೊಂದೂ ಊರುಗಳು ವಿಶಿಷ್ಟ
ಕಥೆಗಳನ್ನು ಹೇಳುತ್ತವೆ.
🌇 ಬಿಡದಿ ತಟ್ಟೆ ಇಡ್ಲಿ
ಬೆಂಗಳೂರಿನಿಂದ
ಮೈಸೂರಿಗೆ ಹೋಗುವಾಗ ಸಿಗುವ ಮೊದಲ ಊರು ಬಿಡದಿ. ಇಲ್ಲಿನ
ತಟ್ಟೆ ಇಡ್ಲಿ ಈಗಲೂ ಜನಪ್ರಿಯ. ರೇಣುಕಾಂಬ
ಹೋಟೆಲ್ ಹಾಗೂ ಶ್ರೀ ಶಿವದರ್ಶನ
ಹೋಟೆಲ್ ಅಲ್ಲಿ ಸಿಗುವ ತಟ್ಟೆ ಇಡ್ಲಿ ಸವಿಯಲು ಬೇರೆ ಊರುಗಳಿಂದ ಇವತ್ತಿಗೂ ಜನರು ಬರುತ್ತಾರೆ.
🐛 ರಾಮನಗರ — ರೇಷ್ಮೆ ನಾಡು
ಮುಂದೆ
ಸಿಗುವುದು ರಾಮನಗರ. ಒಮ್ಮೆ ರೇಷ್ಮೆ ಬೆಳೆಗೆ ಪ್ರಸಿದ್ಧವಾಗಿದ್ದ ಈ ಊರು ಇಂದಿಗೂ
ಆ ಪರಂಪರೆಯನ್ನು ಹಿಡಿದಿಟ್ಟುಕೊಂಡಿದೆ. ಜಾನಪದ ಲೋಕದ ಪಕ್ಕದಲ್ಲಿ ಇರುವ
ಕಾಮತ್ ಲೋಕರುಚಿ ಅಲ್ಲಿ
ಸಿಗುವ ಉತ್ತರ ಕರ್ನಾಟಕದ ಊಟ ಸವಿಯಲು ಇಂದಿಗೂ
ಬೆಂಗಳೂರಿನಿಂದ ಜನ ಬರುತ್ತಾರೆ. ರಾಮನಗರದ
ಜನಾರ್ಧನ್ ಹೋಟೆಲ್ನ ಮೈಸೂರು ಪಾಕ್
ಅದರ ಮೂಲ ರುಚಿಯನ್ನು ನೀಡುತ್ತದೆ.
🪆 ಚನ್ನಪಟ್ಟಣ — ಬೊಂಬೆಯ ಲೋಕ
ರಾಮನಗರದ
ನಂತರ ಸಿಗುವುದು ಬೊಂಬೆಗಳ ನಾಡು — ಚನ್ನಪಟ್ಟಣ. ಇಲ್ಲಿನ ಬೊಂಬೆಗಳು ವಿಶ್ವ ಪ್ರಸಿದ್ಧ. ಇಂದು ಚೀನಾ ಬೊಂಬೆಗಳ
ಅಗ್ಗದ ದರದ ಹೊಡೆತಕ್ಕೆ ಸಿಕ್ಕರೂ, ಚನ್ನಪಟ್ಟಣದ ಬೊಂಬೆಗಳಲ್ಲಿ ಜೀವಂತಿಕೆ ಇದೆ.
🍽️ ಮದ್ದೂರು — ವಡೆ ಮತ್ತು ಎಳನೀರು
ಮದ್ದೂರಿನ
ವಡೆ ಎಂದರೆ ಅದು ಒಂದು ಬ್ರಾಂಡ್!
ಮದ್ದೂರು ಟಿಫನೀಸ್ನಲ್ಲಿ ಸಿಗುವ ವಡೆ ಸವಿಯದೆ ಮುಂದೆ
ಹೋದರೆ ಪ್ರಯಾಣ ಪೂರ್ಣವಾಗದು. ಶಿವಳ್ಳಿ ಹೋಟೆಲ್ನ ತರೇವಾರಿ ತಿನಿಸುಗಳು
ಕೂಡಾ ಅದ್ಭುತ. ಕಾವೇರಿ ನದಿಯ ನೀರಿನಲ್ಲಿ ಬೆಳೆಯುವ
ಮದ್ದೂರಿನ ಎಳನೀರು ಮನಸ್ಸಿಗೆ ತಂಪು ನೀಡುತ್ತೆ.
🧈 ಮಂಡ್ಯ — ಬೆಣ್ಣೆ ನಗರಿ
ಇದು
ಕಬ್ಬಿನ ನಾಡು, ಕಾವೇರಿಯ ನಾಡು ಮತ್ತು ಬೆಣ್ಣೆ ನಗರಿ. ಇತ್ತೀಚೆಗೆ “ಆರ್ಗಾನಿಕ್ ಮಂಡ್ಯ” ಹಳ್ಳೀಜೀವನವನ್ನು ಹೊಸ ರೂಪದಲ್ಲಿ ನಗರಜನರ
ಮುಂದೆ ತಂದಿದೆ. ಇಲ್ಲಿನ ಕಬ್ಬು ಬೆಳೆ ಮತ್ತು ಆಲೆಮನೆ
ಅಷ್ಟೇ ಪ್ರಸಿದ್ಧ, ಮಂಡ್ಯದ ಕಾವೇರಿ ನದಿ ನೀರಿನ ಹೋರಾಟಗಳು.
🏞️ ಶ್ರೀರಂಗಪಟ್ಟಣ — ಐತಿಹಾಸಿಕ ಜಾಗ
ಮಂಡ್ಯ
ಮುಗಿದ ಮೇಲೆ ಸಿಗುವುದು ಶ್ರೀರಂಗಪಟ್ಟಣ.
ಐತಿಹಾಸಿಕ ಮಹತ್ವ ಪಡೆದ ಈ ಸ್ಥಳದ
ಬಗ್ಗೆ ಪ್ರತ್ಯೇಕವಾಗಿ ಬರೆಯಬೇಕಾದಷ್ಟು ಕಥೆಗಳಿವೆ. ಶ್ರೀರಂಗಪಟ್ಟಣದ ಮುಂಚೆ ಸಿಗುವ ಬಾಬುರಾಯ ಕೊಪ್ಪಲಿನ ಭುವನೇಶ್ವರಿ ಹೋಟೆಲ್ನಲ್ಲಿ ಸಿಗುವ ಊಟ ಮಾಂಸಾಹಾರಿ ಪ್ರಿಯರ
ನೆಚ್ಚಿನ ಸ್ಥಳ. ಶ್ರೀರಂಗಪಟ್ಟಣ
ಸೇತುವೆ ದಾಟುವಾಗ ಕಾವೇರಿ ನದಿಯತ್ತ ಕಣ್ಣು ಹಾಯಿಸದೆ ಹೋಗುತ್ತಿರಲಿಲ್ಲ.ಇಲ್ಲಿ ಕಾವೇರಿ ಮೈತುಂಬಿ ಹರಿಯುತ್ತಿದ್ದರೆ ಮನಸ್ಸಿಗೆ ಏನೋ ಒಂದು ರೀತಿ ಸಮಾಧಾನ.
🛣️ ಹೊಸ ಹೆದ್ದಾರಿ, ಹಳೆಯ ನೆನಪುಗಳು
ಹಳೆಯ
ಹೆದ್ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದಾಗ
ಎಲ್ಲೆಡೆ ಹೋಟೆಲ್ಗಳು, ಬೊಂಬೆ ಮತ್ತು
ಇತರೆ ಅಂಗಡಿಗಳು, ಎಳೆನೀರು ಮಾರುವವರು — ಈ ಎಲ್ಲವೂ ಪ್ರಯಾಣಕ್ಕೆ ಒಂದು ಜೀವ
ತುಂಬುತ್ತಿದ್ದವು.
ಒಮ್ಮೆ ಕಾವೇರಿ ನೀರು ವಿವಾದವು ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ತೀವ್ರಗೊಂಡಾಗ, ಈ ಹೆದ್ದಾರಿಯ ಮಂಡ್ಯದ ಸಮೀಪದಲ್ಲಿಇರುವ ಬೂದನೂರು ಗ್ರಾಮದ ಜನರು ರಸ್ತೆ ಬಂದ್ ಮಾಡಿ, ಅಲ್ಲಿ ಪಲಾವ್ ಮತ್ತು ಪಾನಕ ತಯಾರಿಸಿ ಸಿಕ್ಕಿಹಾಕಿಕೊಂಡ ಪ್ರಯಾಣಿಕರು ಹಾಗೂ ಸ್ಥಳೀಯರಿಗೆ ವಿತರಿಸುವ ಮೂಲಕ ಮಾಡುತ್ತಿದ್ದ ಒಂದು ವಿಶಿಷ್ಟ ಪ್ರತಿಭಟನೆಗೆ ಸಾಕ್ಷಿ ಆಗಿದ್ದೆ.
ಇಂದು ಎಕ್ಸ್ಪ್ರೆಸ್ ಹೈವೇ ಬಂದ ನಂತರ, ಈ ಊರುಗಳು ಮತ್ತು ಅವುಗಳ ಸೊಗಸು ಬೈಪಾಸ್ ಆಗಿವೆ. ಹಳೆ ಹೆದ್ದಾರಿಯ ಸಂಚಾರ ದಟ್ಟಣೆ, ಬೆಂಗಳೂರಿನದ್ದನ್ನೇ ಮೀರಿಸುತ್ತಿತ್ತು. ಪ್ರತಿಯೊಂದು ಊರು ದಾಟುವುದೂ ದುಸ್ಸಾಹಸವೆನಿಸುತ್ತಿತ್ತು.ಬೆಂಗಳೂರಿನಿಂದ ಮೈಸೂರಿಗೆ ಇಂದು ಹೊಸ ಹೆದ್ದಾರಿಯಲ್ಲಿ ಕೇವಲ ಎರಡು ಗಂಟೆ ಸಾಕು — ಆದರೆ ಹಳೆಯ ರಸ್ತೆಯ ಆ ನೆನಪುಗಳು, ಆ ರುಚಿಗಳು, ಆ ನೋಟಗಳು ಇಂದು ಮರೀಚಿಕೆಗಳಾಗಿವೆ.
ಇತ್ತೀಚೆಗೆ
ಹಳೆಯ ಹೆದ್ದಾರಿಯಲ್ಲಿ ಮತ್ತೆ ಪ್ರಯಾಣಿಸಿದಾಗ — ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ — ಎಲ್ಲವೂ ಕಣ್ಣ ಮುಂದೆ ಹಾದುಹೋಯಿತು.
ಪ್ರತಿಯೊಂದು ಊರು ಒಂದೊಂದು ನೆನಪಿನ
ಪುಟ.

Comments
Post a Comment